ಬುಧವಾರ, ಏಪ್ರಿಲ್ 29, 2020

ಆರಲಿದೆ ನೀ ಆರಾಧಿಸುವ  ಜ್ಯೋತಿ
ಎಣ್ಣೆ ಮುಗಿದ ಬತ್ತಿಯು
ಪ್ರಜ್ವಲಿಸಿದೀ ತನುವಲಿ
ನೋಡ ನೋಡುತಲೆ
ಬೆಳಕ ದೂರಕ್ಕೆ ಚಿಮ್ಮಿದೆ

ನಭದೆತ್ತರ ಏರಿದೆ
ದೇಶದೊಲುಮೆಯ ಬಿತ್ತಿದೆ
ತಿರುಗಿ ನೋಡುತಿಹರೆನ್ನಲು
ನನ್ನ ಮನವಿದೋ ಜಾರಿದೆ
ಕತ್ತಲೆಯನೇಕೋ ನೆಚ್ಚಿದೆ

ಮತ್ತೆ ಉರಿಯಲು ನೀ ಬೆಳಕಲ್ಲ
ಅದೇ ಎಣ್ಣೆ ಬತ್ತಿಯ ಮಿಶ್ರಣ
ಬೂದಿಯಾಗಿವೆ ಬದುಕಲ್ಲಿ
ಕಣ್ಣಕಾಂತಿಯ ಬೆಳಗು
ಹರಿವ ನೀರಿನ ಝಳಕು
ನಿನ್ನಿಂದ ಕಾಣುತಿದೆ ಈ ಭುವಿಯಲಿ
ಬೆಳಗಿದಾ ಸೂರ್ಯ ಮುಳುಗದಿಹನೇ
ಕತ್ತಲೆಗೆ ಭುವಿಚಂದ್ರನೊಡನಾಟವನೇ
ಅವನಿತ್ತ ಪ್ರೀತಿ ಭಿಕ್ಷೆ ಎನ್ನುವುದೇ
ಅವನಿಲ್ಲದಿರೆ ಇನ್ನೊರ್ವರಿರುವುದೇ
ಅಂತ್ಯವಿವುದಯ್ಯಾ ಗೆಲುವಿನಾಟಕ್ಕೆ
ನೋವುನಲಿವು ಸೋಲಿನಾ ಪಾಠಕ್ಕೆ

ಪ್ರಾಣದೇವನ ಲೀಲೆಗೆ ನಾಮ ನನ್ನದು
ಆತ್ಮ ದೇಹವ ತೊರೆಯಲು ವಿಧಿ ಎನ್ನದು
ಸರ್ವಕಾಲಿಕಾ ಸತ್ಯವು ಸಾವ ತಡೆವರಿಲ್ಲ
ನಾನೇ ನಾನೇ ಎನುತ ಬೀಗಿದವರೆಲ್ಲ
ಮಡಿದ ಋಣವ ಪಡೆದವರು
ದೀಪದಾ ಬೆಳಕಲಿ ಬದುಕುವರು

ಭಾನುವಾರ, ಏಪ್ರಿಲ್ 26, 2020

ತತ್ವ ಇರದ ಗುಡಿಗಳಲ್ಲಿ
ದೇವನಿರುವುದೇ
ಅಹಂ ಇರುವ ಪಂಕ್ತಿಯಲ್ಲಿ
ತೃಪ್ತರಾಗುವುದೇ
ಕೃಷ್ಣ ಕೃಷ್ಣ ಕೃಷ್ಣನೆಂದರೆ
ದೇಹದಾತ್ಮದೊಳು ದೇವ ನಗುವನು
ಧರ್ಮರಾಯನ ಅಹಂ ಮುರಿವನು
ಎನ್ನಾತ್ಮವ ಕಡೆವೆನೆಂದು
ಕೈ ಮುಗಿದು ಕುಳಿತರೆ
ಜೀವನ ಭೋಗಗಳ ನೀ ತಡೆದು 
ಪಾವನ ಮಾಡಿದೆ ರಂಗಯ್ಯಾ
ಎಮ್ಮ ಕಾಪಡುವ ಕಾರ್ಯವು
ಪ್ರಾರ್ಥಿಸೆ ನಿನ್ನದೆಂದರೆ
ಕಾಯಕ್ಕೆ ಕಾರ್ಯವ ನೀಡಿ
ಕುಟುಂಬವ ನೀ ಸಲಹಿದೆನಯ್ಯಾ..
ಊರ ಕೇರಿಯ ಅತೀ ದೂರ
ಅಗ್ರಹಾರಿಗಳ ಸೇವೆಯ ಭಾರ
ಮೇಲೆ ನರಬೇಟೆಯ ಕಾಡು
ಹರಿದ ಗುಡಿಸಲ ಸಾಲು ಗೂಡು
ಕೂಗಳತೆಯಲಿ ಊರ ಶೂದ್ರರು
ನಾವೆಲ್ಲ ಅವರಿಗೆ ಅತೀ ಶೂದ್ರರು
ಇದೇ ನಮ್ಮ ಇತಿಹಾಸ
ಭಾರತದ ಅತಿವರ್ಣ ಇತಿಹಾಸ

ಮಳೆಗಾಲದೊಳು ಚಿಟಪಟ
ಹೆತ್ತವರ ಗುಡಿಯೊಳಗೆ
ಚಿಗುರಿದವರಿಗೆ ಅಭೀಷೇಕ
ಹಸಿದಾಗ ಹೊಟ್ಟೆಯ ಸಂಕಟ
ಸತ್ತವರು ಮಣ್ಣಡಿಯೊಳಗೆ
ಉಳಿದವರಿಗೆ ಪಂಚಾಮೃತಯೋಗ
ಇದೇ ನಮ್ಮ ಇತಿಹಾಸ
ಭಾರತದ ಅತಿವರ್ಣ ಇತಿಹಾಸ
ಕಟ್ಟಿದ ಬಾವಿ ಕಟ್ಟೆಯ ಮೇಲೆ
ಭರವಸೆಯ ಹೆಜ್ಜೆ ನೂಕುತಿದೆ
ಮೇಲಕ್ಕೆ ಮೇಲಕ್ಕೆ ನೀರನ್ನು
ಏದುರಿಸಿರ ಭಾರಕ್ಕೆ ಕೈ ಬಾಚಿದೆ
ಅಮ್ಮ ನೀನಾದೆಯಾ..

ಬಿಸಿಲ ತಾಪದೊಳು ಬಾಡಿದೆ
ದೂರ ದೂರದ ಕಾರ್ಯವು
ಜೀವದೊಲುಮೆ ತರುತಿದೆ
ಕಣ್ಣು ಕಾಯ್ದಿಟ್ಟು ಕಾದವರಿಗೆ
ಅಮ್ಮ ನೀನಾದೆಯಾ..

ಬಿಸಿ ಬಿಸಿಯ ಕೂಳ ಬಡಿಸಲು
ಹಸಿದಿರುವೆ ಕರುಗಳ ತುಂಬಿಸಲು
ನಮಗರಿವಿಲ್ಲದ ಪಯಣ
ನೀನೊಬ್ಬಂಟಿಯಾಗಿ ಸಲಹಿದೆನು
ಅಮ್ಮ ನೀನಾದೆಯಾ..

ಕ್ಷಮಿಸಿಬಿಡು ನನ್ನ ಓರಟು ತನವ
ನಿನಗೆ ಸಾಟಿಯಿರುವ ದೇವರ
ನಾ ಕಾಣಲಾರೆನು ಜನುಮದಲಿ
ಸಲಹುವೆನು ನಿನ್ನ ಈ ಜೀವನದೊಳು
ಅಮ್ಮಾ ಅಮ್ಮಾ ಅಮ್ಮಾ..
ಹುಟ್ಟಿರುವ ಹಕ್ಕಿ
ಗೂಡಿಂದ ಬಿದ್ದು
ಹೊರಲಾಡಿ ಪ್ರಾಣ ತೆತ್ತೆಂದರೆ
ರಾಮ ರಾಮ ಎಂದಿಪ್ಪರಿವರು
ನರಲಾಟದಲ್ಲಿರುವ 
ಹಸುಳೆಯ ಕಂಡರೆ
ದೇವನಾಟವೆಂದೆನುವ
ನರನಾಟಕವ ನೋಡಿರಯ್ಯ
ಕಲಿ-ತವರಲ್ಲಿ...

ಶುಕ್ರವಾರ, ಏಪ್ರಿಲ್ 24, 2020

ಮರುಳು ಮನಸು
ಇರುಳ ಕನಸು
ನಿನ್ನ ಜೊತೆಯನು ತುಂಬಿದೆ
ನಡೆದ ಜೋಡಿ
ಬಿಡದ ಮೋಡಿ
ನೆನಪ ಕತೆಯನು ಕೆದಕಿದೆ
ಮರೆಯಲಾರೆದೆ
ಕಾಣಲಾರದೆ
ನಿನ್ನ ನಗುವನು ಬಯಸಿದೆ

ಚೆಲುವಿಗಾಗಿ ಮರುಳಿಗಾಗಿ
ಹಚ್ಚುತಿಹರು ಬಣ್ಣಗಳ
ಗೆಲುವಿಗಾಗಿ ಪ್ರಚಾರಕ್ಕಾಗಿ
ಬಿಚ್ಚುತಿಹರು ಹಣಗಳ
ಹುಚ್ಚರಿವರು ಹೆಚ್ಚುತಿಹರು
ಸತ್ತು ಹೋಗುವ ಬದುಕಲಿ
ಚೆಲುವಿಗಾಗಿ ಮರುಳಿಗಾಗಿ
ಹಚ್ಚುತಿಹರು ಬಣ್ಣಗಳ
ಗೆಲುವಿಗಾಗಿ ಪ್ರಚಾರಕ್ಕಾಗಿ
ಬಿಚ್ಚುತಿಹರು ಹಣಗಳ
ಹುಚ್ಚರಿವರು ಹೆಚ್ಚುತಿಹರು
ಸತ್ತು ಹೋಗುವ ಬದುಕಲಿ

ಕರ್ನಾಟವೆಂಬ ನೆಲದೊಳ್
ಪದ ಕಸಿಯ ಮಾಡಿದೊಡೆ
ಹಸಿರಾಗುವುದೆನ್ನ ಕನ್ನಡ
ಹೆಸರಾಗುವುದೆನ್ನ ಕನ್ನಡ
ಹಳೆಗನ್ನಡ ನಡುಗನ್ನಡ
ಹೊಸಗನ್ನಡ ಪ್ರಾದೇಶಿಕ ಕನ್ನಡ
ಪುಸ್ತಕ ಸಮಚಿತ್ತದೊಳ್
ಬರೆವ ಚೆಲುವ ನುಡಿಗನ್ನಡ
ಎನ್ನೆದೆಯ ಭಾಷೆಯಾಯಿತು
ಜ್ಞಾನ ಶಿಖರವನು ತಾತ್ವಿರಿಂದೆತ್ತಿ
ಹೊನ್ನ ಪದಗಳ ಸಾಗರದಿ
ಕವಿಪುರಜನರೆಲ್ಲಾ ಕಡೆದಾಗ
ಅದುವೇ ಅಮೃತ ಕನ್ನಡ
- ಪೃಥ್ವಿರಾಜ್ ಜಿ 

ಬುಧವಾರ, ಏಪ್ರಿಲ್ 22, 2020

ನೀಲನಭವನು ಸೀಳಿ ಬರುವ
ಮಿಂಚು ಸಿಡಿಲುಗಳೆಲ್ಲ
ದಗೆಯೆದ್ದಿಹ ಮನವನು
ತಣಿಸ ಬಲ್ಲದೇನು
ಒಲವೊಡೆದ ಹೃದಯವನು
ಸನಿಹದಲಿ ಪುಟಿದೇಳುವ
ನಗೆಬುಗ್ಗೆಯೊಂದು
ಜೋಡಿಸಬಹುದೇನು

ಮಣ್ಣಹೀರಿ ನೀರ ಕುಡಿಯುತಿವೆ
ರವಿ ಕಿರಣಗಳು ಕಾಣದಂತೆ
ಕರಗುತಿದೆ ಭುವಿಯು
ಮತ್ತೆ ನಗುವ ಭರವಸೆಯಲಿ
ನನ್ನ ಮೀರಿ ಮಿಡಿಯುತಿವೆ
ನೆನಪುಗಳೆಲ್ಲ ನೆರೆಯಂತೆ
ಒಣಗಿರುವ ಬದುಕ ಬಯಕೆ
ಸುತ್ತಗೆ ಹನಿದಿದೆ ನಿನ್ನಾಸರೆಯಲಿ

ಮೊದಲ ಮಳೆಯಂತೆ ಜಾರದಿರಲಿ
ಹಸಿರ ತುಂಬುವ ಬಸಿರ ಚಿಗುರು
ಪ್ರೀತಿ ಪರಿಸರವನು ನಾಳೆಗಾಗಿ
ನಮಗಾಗಿ ಬೆಳೆಸುತಿರಲಿ
ತೊದಲ ಸವಿಯ ಮಾತುಗಳಿರಲಿ
ಎದೆಗಪ್ಪಿದ ಸಲುಗೆಯ ಜೀವದುಸಿರು
ನಮ್ಮ ನಗುವ ಬೆಳದಿಂಗಳಾಗಿ
ಈ ಬದುಕ ಬೆಸೆಯುತಿರಲಿ

ಮಂಗಳವಾರ, ಏಪ್ರಿಲ್ 21, 2020

ನೀನಿಟ್ಟ ಹೆಜ್ಜೆಗುರುತು ಮಾಯವಾಗದ ಚೆಲುವು
ಮಳೆಯ ಕೆಸರಲ್ಲವದು ನನ್ನೆದೆಯ ಒಲವು

ಮನದ ಕಾಮನೆಗಳ ಬದಿಗಿಟ್ಟು ಕಾಯುತಿಹೆನು
ನಿನಗಾಗಿ ಉಳಿದಿದೆ ಒಲವ ಆಕಾಂಕ್ಷೆಯೆಲ್ಲವು 

ಕದಲಿದ ಕಡಲನು ಅವಿಯಾಗಿಸೋ ರವಿಯಂತೆ
ಬಳಲಿದ ಒಡಲಿನ ದಾಹ ನೀಗಿಸುವಂತೆ ನಿನ್ನ ಬರವು

ಸಖಿ ರಾಧೆಯ ಕೃಷ್ಣ ಹಂಬಲಿಸುವಂತಿದೆ ನೋಡು
ತುಡಿಯುವ ಜೀವದೊಳಗೆ ನಿನ್ನ ಕಾಣುವ ಹಸಿವು

ಗೆಳತಿ ಒಬ್ಬಂಟಿ ಜೀವವಿದು ಒಂದೊಂದೆ ಹೆಕ್ಕುತ್ತಾ
ಅಕ್ಷಿಯೊಳಗೆ ತುಂಬುತಿವೆ ನಿನ್ನೊಂದಿಗೆ ಕಳೆದ ನೆನವು

- ಪೃಥ್ವಿರಾಜ್ ಜಿ.
ಕಿವಿಗಂಟುವ ಗಂಟೆ ಸದ್ದುಗಳೆಲ್ಲವನು ನುಂಗಿದವರಾರು
ಕೆಲವೊತ್ತು ಬೊಬ್ಬಿರಿದು ಎನ್ನ ಗಮನ ನುಂಗಿದವರಾರು

ಭಗವಂತ ನಿರ್ವಿಕಾರನು ನಿರಂಹಕಾರಿಯು ತಾನೇ
ಗುಡಿಯಲಿ ಮಸೀದಿಯಲ್ಲಿಟ್ಟು ಬುದ್ದಿಯ ನುಂಗಿದವರಾರು

ನಿನ್ನ ಮಾತ್ರದಿ ಪ್ರವೇಶವು ಅವನ ಬಿಟ್ಟು ಅಸ್ತಿತ್ವವಿಲ್ಲದೊಡೆ 
ನನ್ನ ತನವನ್ನು ಮನವನ್ನು ಹಣವನ್ನು ನುಂಗಿದವರಾರು

ಲೆಕ್ಕ ಹಾಕಿರುವ ಲೌಕಿಕ ಜೀವನ ಸಾಂಗತ್ಯದೊಳು
ಮಿತಿರಹಿತ ಅಲೌಕಿಕ ಭಾವದೊಳು ನನ್ನ ನುಂಗಿದವರಾರು

ಗೆಳತಿ ನಮ್ಮ ಚೆಲುವು ಹೊಂದಿಕೊಂಡ ಬದುಕಲ್ಲಿರೆ
ಏಕಬಹುತ್ವದ ಅಲಂಕಾರ ತುಂಬಿ ಬದುಕ ನುಂಗಿದವರಾರು
ಜೀವ ತೊರೆದು ಕೊರೆವ ಬದುಕ
ಕಾಣ ಬಲ್ಲೆಯಾ ನೋಡು..
ಕಡಲ ತಡಿಯ ಹಾಲ ನೊರೆಯಲಿ
ಮೊರೆವ ಆಕ್ರಂದಣವ ಕೇಳು

ಎಷ್ಟು ಜನ್ಮವ ತಳೆದರೇನು
ಮನುಜನಾಗಿ
ಗುಡಿಗೆ ಬಂಗಾರ ಮೆತ್ತಿದರೇನು
ದಾನಿಯಾಗಿ
ಸೇರದಿದ್ದರೆ ನಿನ್ನ ತನುವು
ನಿನ್ನೊಳಿರುವ ಜನಮನವನು

ಮೈಯ ನೀನು ತೊಳೆದರೇನು
ಪವಿತ್ರ ನದಿಯಲಿ
ಸತ್ಯವ ಸುಳ್ಳಿಗೆ ಬೆಸೆದರೇನು
ನೂರು ವೇದಿಕೆಯಲಿ
ಮಾಡದಿರೆ ಅನೂಕೂಲವನು
ಬದುಕುವ ಪರಿಸರಕ್ಕೆ

ಇಹದೊಳಗೆ ಬದುಕು ಕಾಣದಿರೆ 
ಸಕಲವು ನಿನ್ನದೆಂದು
ಕನಿಕರಿಸು ತಪ್ಪು ಮಾಡಿದೆನೆಂದು
ಪರದೊರಗೆ ಕಂಡು
ನೂಕಿ ಬಿಡಲಿ ನೆನಪುಗಳ
ಪಶ್ಚಾತಾಪದ ನರಕದೊಳು..

ಸೋಮವಾರ, ಏಪ್ರಿಲ್ 13, 2020

ನರನಾಡಿಯೆಲ್ಲ 
ಸ್ವಾರ್ಥದ
ವಿಷವಿರಲು
ನಿನ್ನ ಬಿಡುವರೆ ತಾಯಿ
ಹಣಕ್ಕಾಗಿ 
ಮಾರುವರು
ಕಟ್ಟಿರುವವರು
ನಾವಾದರು
ಕೇಳುವರಾರು
ಪಕ್ಷಪಾತಿಗಳೆಲ್ಲ
ಕೊಳಕಾಗಿಹರು
ಮುಟ್ಟಿದರೆ ಶಾಪ
ನಮ್ಮ ತಟ್ಟ ಬಹುದೇನೊ
ಪಶ್ಚಿಮದ ಕಾಡನ್ನು
ಬೆಟ್ಟ ಗುಡ್ಡವನು
ಕೊರೆದರೂ ಅಗೆದರೊ
ಮಾರಿ ತಿಂದರೊ
ತೀರದ ದಾಹವದು
ಮತ್ತೆ ಮತ್ತೆ 
ನಿನ್ನ ಹಸಿರ ಸೆರಗನು
ಎಳೆಯುತಿಹರು
ನಿನ್ನವರು ಅವರಲ್ಲ
ಸತ್ತಿರುವವರು
ಮೌನಕ್ಕೆ ಜಾರಿದವರು
ಆರ್ಭಟಿಸುವವರಿಗೆ
ತಾಯಿ ಜಲವಾದರೇನು
ಮಣ್ಣಾದರೇನು
ಮರಗಿಡ 
ಪ್ರಾಣಿಪಕ್ಷಿಯಾದರೇನು
ಕಣ್ಣಿಗೆ ಮಣ್ಣೆರಚಿ
ಅಧಿಕಾರ ಪಡೆದು
ಮತ್ತೆ ಸುಳಿಯುವವರೇ
ಸುಳಿಗೆ ಮಾಡುವವರೇ
ನಿನ್ನ ಹೆಸರುಗಳ
ಬಾಡಿಗೆ ಪಡೆದವರು
ಬೊಬ್ಬಿಡುವ 
ಮಾಧ್ಯಮವ
ಪಕ್ಕಕ್ಕಿಟ್ಟು 
ಸಂಬಂಧಿಸಿದ ಇಲಾಖೆಯ 
ಕೆಲಸ ಮಾಡಲು 
ಬಿಟ್ಟು
ಜನರೆಲ್ಲ 
ನೆಮ್ಮದಿಯಲಿರಲು
ಅವಕಾಶ ಮಾಡಿಕೊಟ್ಟು
ನಿಮ್ಮ ಕಾರ್ಯವ ಮಾಡಿದರೆ
ಎಲ್ಲವು ಸುಗಮ
ಕಾಯಾಂದವನು 
ನಿವಾರಿಸು ನಿಧಾನಿಸು
ಬದುಕಿಗೊಂದವನು
ನೀ ಕಾದಿರಿಸು
ಸಿಂಗರಿಸು..

ನಿನ್ನಳತೆಯನು
ನೀನಾಡದಿರು
ಕಣ್ಣಳತೆಯಲಿ
ಕೊಂಡಾಡುವರು
ಸಿಹಿಕಹಿಗಳನು..

ಬೆರಳೆಣಿಕೆಯಲಿ
ನಿನ್ನವರಿದ್ದರೇನು
ಚಾಣಕ್ಯ ಇದ್ದವರ
ಬಳಸಿ ರಾಜ್ಯ ಕಟ್ಟಿಸಿದ
ನೀನಾಗು ನಿನ್ನವರಿಗಾಗಿ..
ಊರದಾರಿಯ ನಡುವೆ
ಮನುಜ ಮನವಿರಲು
ತನುವ ಕಾಪಿಡಲು
ನಾನಾಗಲಾರೆನು ಶುದ್ಧನು..
ತಳಿರು ತೋರಣವನ್ನ
ಕಟ್ಟಿದಾ ಮನೆಯ
ಮುಟ್ಟದೆ ನೋಡದೆ
ಊಹಿಸಲಾರೆ ಶುಭವನು..

ಎಲ್ಲ ದೇವರ ಒಳಗಿಟ್ಟು
ಹೊರ ಅಂದವನು ನನಗಿಟ್ಟು
ಮುಟ್ಟದಿರೆಂದು ಭೋದಿಸೆ
ನಾ ಮುಟ್ಟದಿರಲಾರೆನು
ನನಗಿಂತ ಕೆಳತಳವನು...

ಬೆನ್ನ ತಟ್ಟಿದವರೆಲ್ಲ 
ಬೆಲ್ಲ ತಮಗೆಂದು ತಿಂದರೆ
ಮಾಡಿದವನು ನಾನೆಂದು
ಬಾಣಲೆ ಕರಿಯ 
ತೊಳೆವವನಾಗಲಾರೆನು...

ಕಾಲನಿಗ್ರಹಿಸಿ ಹೊಳಪು
ಹೊಳೆದಿವುದೆನ್ನಯ ಬುದ್ಧಿ 
ಮತ್ತೆ ದೂಡಲು ನಾನು
ಕಾದ ಸೀಸದ ತುಂಡು
ಕಾನೂನಿನ ಪುಸ್ತಕವು...

ಸ್ವೀಕರಿಸಿ ಸ್ವಾಗತಿಸು
ಸ್ವಾತಂತ್ರ್ಯದ ನೆರಳು
ನಾನಾಗುತಿಹೆನೆಂದು
ನನ್ನತನದ ಹೆಮ್ಮೆಯಿದೆ
ಈ ಮನುಜ ಕುಲಕೆ
ಚೆಲುವಕಾಂತೀಯಕೃತರವಿಮಣಿಯನೀಡಲು
ಯಾದವಜನಪತಿಗೆಗೊಲ್ಲರಾಮುರಳಿಯ
ಬೇಡಿಕೆಯನೀರಾಕರಿಸೆಯಾದವಸಹನು
ಸತ್ರಜಿತೆನ್ನಸಹೋದರಪ್ರಸೇನಗೆನೀಡಿದ
ಪ್ರಸೇನಾಮೃಗಬೇಟೆಯಾಡಲಾಕಾನನದಿ
ಸಿಂಹರಾಜನುಗೈದುಯಾದವವಧೆಯನು
ಮಣಿಯಪಡೆದನುಖುಷಿಯಲಿ

ಕಾನನದೊಳಗರ್ಭದಿಂದುದಿಸಿ
ಮರಣವಿಲ್ಲದಕರಡಿಯು
ಮೃಗೇಂದ್ರನಾಮಣಿಸೆಪಡೆದನಾಮಣಿಯ
ತನ್ನಪುತ್ರಿಯಾಡಲಾಗುಹೆಯೆಲ್ಲವು
ಬೆಳಗಿದಾಖುಷಿಯಿಂದಲೆ
ಭೋರ್ಗರೆಧುಮ್ಮಿಕ್ಕುವಾಜಲಧಾರೆಯಂತೆ
ಸಂತೋಷಪಟ್ಟಾನಾರಾಮಭಕ್ತನು

ಕುಲಜನರುಪುರವಾಸೀಗಳೆಲ್ಲಕೃಷ್ಣನಾನಂಬದೆ
ಅಪರಾದವನ್ನೆಸಗಿದಚೋರನಿವನೆಂದೊಡೆ
ಕುಪಿತವಾಯಿತಾತುಂಡುಯಾದವರಸಂಘಗಳು
ಸ.. ಸನಿದಪ ಮಗರಿಸ
ದನಿಸ ಗಮಪದನಿಸ..
ನಿನ್ನೆಜ್ಜೆಯ ಗೆಜ್ಜೆಯಧ್ವನಿಯು
ಕಿವಿಗಿಂಪಿನ ಶೃಂಗಾರವು
ಕಣ್ಣಿನ ನೋಟಗಳೆಲ್ಲವು
ಶಾರದೆ ನವಿಲಿನ ಗರಿನಾಟ್ಯವು
ಓಂ ದೀಂ ತನನಂ
ಡಮರುಗವು ಬಡಿದಿರಲು
ಕೈಲಾಸ ನಡುಗಿರಲು
ಮೈಯೆಲ್ಲ ಹಾವಭಾವ
ರೋಮಾಂಚನದ ಹೊನಲು
ನಟರಾಜ ರಮನೀಯ 
ದರುಶನದ ಭಾಗ್ಯವೆಮಗೆ
ಕುಣಿಯಲಿ ಕುಣಿದಾಡಲಿ
ಮನವೆಲ್ಲವು ತಣಿಯಲಿ..
ಎಲ್ಲಾ ದೇವರ ನೋಡಿ
ಒಂದು ದೇವರ 
ನಿನ್ನವಾಗಿಸೋ ಮುನ್ನ                     
ಸ್ವೀಕರಿಸು 
ಪ್ರೀತಿ ಆದರಗಳಿಂದ 
ನಿನ್ನ ಬದುಕನ್ನ...  
ಕಾವವನು ಕಾಯುವನು
ಸಂಶಯವ ಕಾಣದೆ
ನಗುವ ತರುವ ಮೊಗದಿ

ನೀ ಕರೆಯದಿರು
ಎದೆಯ ಕೊರೆಯದಿರು
ದೇವನಿಲ್ಲ ಗುಡಿದೇಹದೊಳಗೆಂದು

ನೀನಾಗುವೆ ನಮ್ಮವರಿಗೆ
ಆತನಿರುವ ಸಂವೇದನೆಯು
ಈ ನಿಜವರಿಯೆನೇನು
ಸಂಕಟ ತಾ ನಮಗಿರದೆ
ಕಲ್ಲುಗೋಡೆಗಳಿಗೇನಾಯ್ತು
ನೀ ಬೊಬ್ಬಿಡಲು

ಬೆಳಂದಿಗಳು ಬೆಳಕಲ್ಲವೇ
ಆ ಕತ್ತಲೆಯೊಳು
ನಿನ್ನ ಹಿರಿ ತಲೆಮಾರು
ಬೆಳಗಿಲ್ಲವೇ ಮನೆಮನವನು
ಮತ್ಯಾಕೆ ಅಂಜಿಕೆಯು
ಈ ಮೂಢ ಮನದಲಿ

ನಾ ಓದದ ಪುಟಗಳ
ತಿರುವಿ ಭಯದೊಳು
ಬದುಕೆನ್ನಲಿ ಅವರು
ನಂಬಿದ ಜೀವನ ನಾನುಳಿಯೆ
ನನ್ನ ದೇವರು ಇವರೆ
ನಮಗೆ ನೆರವಾದವರು

- ಪೃಥ್ವಿರಾಜ್ ಗಂಗೋತ್ರಿ
ಬೇಂದ್ರೆ....

ಬದುಕು ಬೆಂದೊಡನೆ
ಉದಿಪುದು ಜೀವ ಕವಿತೆ
ನೋವು ನಲಿವುಗಳು
ಸಮ್ಮಿಶ್ರ ಭಾವದೊರತೆ
ಸಜೀವ ಬಂದಿಯಾದೊಡೆ
ಒದಗಿ ಬರುವುದೇ ಜೀವನ
ಮತ್ತದೇ ಹಳೆ ನೆನಪು
ಹೊಸದೊಂದು ಸವಿಗವನ
- ಪೃಥ್ವಿರಾಜ್ ಜಿ
ವಲಸೆ ಕಾರ್ಮಿಕರು

ಮಾರಿ ಮಾರಿ ಎಂದು 
ಮನೆಯಲ್ಲಿದ್ದರೆ
ಆಗುತ್ತೇವೆ ಸೋಮಾರಿ
ಬದುಕಲು ಬೇಕಲ್ಲವೆ
ಏನಾದರೊ ಮಾರಿ
ನಾವುಗಳು ಅಲೆಮಾರಿ

ಹಸಿವ ಉರಿ ತಡೆಯುತ್ತಾ
ಬೆತ್ತಲೆ ಪಾದ ಬಿಸಿಲನೇರಿ
ಊರಿನ ಕಡೆಯ ದಾರಿ
ಬೀಳುತ್ತಾ ಹೊರಳುತ್ತಾ
ಹೋಗುತ್ತಿದೆ ಬೆವರ ಸವರಿ
ಪ್ರಾಣ ಪಕ್ಷಿಯು ಹಾರಿ

ಆಳುವವರು ದೊಡ್ಡವರು
ಅಳುವವರು ದಡ್ಡರೆಂದವರು
ರಕ್ತವನ್ನೆಲ್ಲ ಹೀರಿ ಹೀರಿ
ಪ್ರಕೃತಿಯ ಶಿರವೇರಿ
ಬೆಳೆದಾಗ ಬಿಡುವುದೇ
ಆಸೆಗಳ ಹೆಮ್ಮಾರಿ

ಒಂದಲ್ಲ ಹಲವು ದಿನ
ನೆನಪಿಸು ಸೋಮಾರಿ
ದಕ್ಕಿದ ಬದುಕನೇರಿ
ನಾನು ನೀನಾಗಲೇ ಇಲ್ಲ
ಹಸಿವು ಹುಡುಕಾಟ ನಿಲ್ಲಲಿಲ್ಲ
ಇಬ್ಬರನ್ನು ಬಿಡಲಿಲ್ಲ ಈ ಮಹಾಮಾರಿ
ಕದಲಿ ವನದಲಿ
ದೂಕಿ ಬರುತಿದೆ
ಒಲವ ತಂಗಾಳಿ
ತೊದಲು ನುಡಿಯಲು
ಮಳೆಯು ಬರುತಿದೆ
ಮನಸು ಖಾಲಿ ಖಾಲಿ

ಸೊಗಸ ಹಣೆದಿದೆ
ನಿನ್ನ ಎದುರಲೆ
ನಿಂತ ನಿನ್ನ ಕವಿತೆ
ಮೂಗು ಕಾಡಿದೆ
ಮಣ್ಣ ಪರಿಮಳ
ಮರೆತೆ ಅದರ ಸಾಲು

ಕೇಳ ಬಂದೆನು
ಚೆಲುವ ತುಂಬಿದ ಕಣ್ಣಲಿ
ಹೇಳಲಾರೆಯ ಎನ್ನದಿರು
ಸಮಯ ಬರುತಲಿ
ಚಿಗುರು ಮೂಡಲಿ
ಹೇಳಿ ಬಿಡುವೆನು ನಾನು