ಮಂಗಳವಾರ, ಜೂನ್ 29, 2021

ಸಾಧಕನಾಗಲು ಹೊರಟಿರುವೆ ಹರಿಯೇ
ಬಾಧೆಗಳ ಕಳೆದು ವರವ ನೀ ಸುರಿಯೇ
ನನ್ನ ಕರ್ಮಗಳೆಲ್ಲ ನಿನ್ನ ಸೇವೆಗಾಗಿಡುವೆ
ಸಹಕರಿಸು ಆದಿಕೇಶವ

ಅವನಿವನು ಅವಳಿವಳು ಯಾರಿಲ್ಲ ನನಗೆ
ಅವನಿಯೊಳು ಜನಿಸಿದ ಒಂಟಿ ಜೀವವು ನಾನು
ನಿನ್ನ ಹೊರತು ನನಗಾರು ದಯೆತೋರುವರು
ಹೇಳೆನಗೆ ಮಧುಸೂದನ ಸಾಕೆನಗೆ ದಾರಿದ್ರ್ಯ ದಿನ

ಜೋಳಿಗೆಯ ಪಿಡಿದು ಮನೆಮನೆಗೆ ತೆರಳಿದೆನು
ನನ್ನ ನಾಲಗೆಯಲಿ ನಿನ್ನ ನಾಮವ ಕೇಳಿ ನಗುತಿಹರು 
ಹೊರಗೆಲ್ಲ ಅಬ್ಬರದಿ ನಿನ್ನೆಸರಲಿ ತಿಂದುಂಡು ಮಲಗಿಹರು
ಕೇಳಲಾರೆಯ ಮಾಧವ ತಾಳಲಾರನು ಈ ನೋವ




ಗುರುವಾರ, ಜೂನ್ 3, 2021


ಸಾಹ್ಯಾದ್ರಿ ಒಡಲಿದು ನಮ್ಮ ಪಶ್ಚಿಮದ ತಪ್ಪಲು
ಕರಾವಳಿ ಬಾಗಿಲದು ಬೆಟ್ಟ ಗುಡ್ಡಗಳ ಸಾಲು
ದೂರದಲಿ ತೇಲುತಿಹ ಇಳಿಸಂಜೆಯ ಆ ರವಿಯು
ನೋಡುತಲಿ ಮುಳುಗಿದನು ನಾಳೆಯ ಈ ಕವಿಯು

ನಡುವೆ ಬೀಳುವ ಮಳೆ ಕ್ಷಣದೊಳೆನ್ನನು ತಣಿಸೇ
ಹಕ್ಕಿರಾಶಿಯ ಕೂಗು ತೆರೆಮರೆಗಳಲಿ ದ್ವನಿಸೇ
ಹಸಿರಾಯಿತು ಇಳೆ ಮರ ತರಗೆಲೆಗಳೆಲ್ಲವು ಜಾರುತ
ಬೀಸುತಿಹ ಮೈಯ ಸವರುವ ತಂಪಿನ ಮಾರುತ

ಶಿಖರವೆಲ್ಲವು ಹಿಮದೊಳು ಅಡಿಗಿವುದೇಕೆನುತಾ
ಮೌನ ಮಾತುಗಳು ಮನದೊಳಗೆ ಜಿನುಗುತ
ಹಾಲಾಭೀಷೇಕದಂತಿಹ ನೀರ ಧಾರೆಯ ಹರಿವು
ಪರಿಶುದ್ಧಗೊಳಿಸುತಿವೆ ಜೀವ ಕಲ್ಮಶ ದಾರಿಯ

ಮತ್ತೆ ಬದುಕಿರಲಿ ಈ ಕರುನಾಡ ಗುಡಿಯೊಳಗೆ
ಭಾರ್ಗವ ನಾಚುತ ಜಾರುವ ಕಡಲ ತಡಿಯೊಳಗೆ
ಭೋರ್ಗರೆಯುತ ನಗ್ಗುವ ಜಲಪಾತ ಬನದೊಳಗೆ
ನೋಡುವಂತಹ ಪುಳಕವು ಈ ತನುಮನದೊಳಗೆ