ಗುರುವಾರ, ನವೆಂಬರ್ 1, 2018

ದಾರಿಯೊಂದೆ ಬದುಕಿನ
ಮನಸು ನೂರು ಈ ದಿನ
ಬರೆಯಲಾಗದ ಕವಿತೆಗೆ
ನೂರು ಭಾವದ ದೀವಿಗೆ
ಕವಲು ತೆವಲಾದ ಜೀವಕ್ಕೆ
ನೋವು ನಲುಗಿದ ದೇಹಕ್ಕೆ
ಬೇಕು ಪ್ರೀತಿಯ ಬಂಧನ
ಹೃದಯ ಬೆಸೆವ ಆಲಿಂಗನ

ಭಾನುವಾರ, ಸೆಪ್ಟೆಂಬರ್ 2, 2018

ನೀನಾಡುವ ಆಟವೇ ಚೆಂದ
ನಿನ್ನ ಮನೆಯಂಗಳದಿ
ನೋವ ಮರೆಸಿ
ಸುಖವ ಮೆರೆಸುವೆ
ಚಂದಿರನ ತುಂಡು
ನಿನ್ನ ಕಿರುನಗೆಯಲ್ಲಿ
ಹೆತ್ತೊಡಲ ಸಂಭ್ರಮ
ಕಡಲ ತೆರೆಯಂತಿಹುದು
ಬಾಲ್ಯದೊಳು ನಿನಗರಿವಿಲ್ಲದೆ 
ನೀ ಕೃಷ್ಣನಾದೆ

ಲಾಭ ಹೆಣೆಯುವ
ಕೊಳಕು ಮನಸಿದು
ಹೇಳದೆ ಬರುವ
ಕಂಬನಿಯ ಧಾರೆಯಲಿ
ತೊಳೆದು ಬಿಡೆನ್ನೆನನು..
ಕೆಟ್ಟ ಬುದ್ಧಿಯ
ಅಶುದ್ಧ ಪ್ರಜ್ಞೆಯಿದು
ಗಂಗೆಯಂತಿಹ ಮಾತಿನ
ನಿರ್ಮಲ ಹೃದಯದಿ
ಜೊತೆಯಾಗಿಸು
ಬದಲಾಗು ಬದಲಾಗಿಸು
ಪ್ರೀತಿ ಕಳೆದು ಅಳೆವ
ಕಠೋರವಾಗದಿರು
ಮರೆಯಾಗಬಹುದು
ಈ ಜೀವ ನೋಡುತ್ತ
ಸಹಿಸಲಾಗದೆ ಕಳೆಯಲಾಗದೆ

ಸೋಮವಾರ, ಆಗಸ್ಟ್ 27, 2018

ತತ್ವವಿಲ್ಲದ ಪ್ರೇಮ
ಹಸಿವಿನೊಳಗಿದೆ ಎಂಬ
ಶಿರಡಿಯೊಳಗಿನ ಕವಿತೆ
ಮತಾತೀತ ಧರ್ಮ
ಸಂಗೀತವೆಂದ
ಶಿಶುನಾಳ ಗೀತೆ
ಸೇವೆಯೆಂಬ
ಇಹದ ಪೂಜೆಗೆ
ಶಿವನೊಲಿವನೆಂದ
ವಚನಗಳ ಸಾರ
ಆದರೆ
ಮತ್ತೆ ಮತ್ತೆ ಲೆಕ್ಕ
ಹಾಕುತಿಹರು
ಭಕ್ತಿ ಸಮರ್ಪಣೆಗೆ
ಕೂಡಿಟ್ಟದರಲಿ
ಪಾಲು ನೀಡಿ
ಅಶುದ್ಧಗೊಳಿಪರೈ
ಇನ್ನು ಕೆಲವರು
ಭಕ್ತಿಯನ್ನಣಕಿಸಿ
ದೇವನಿಲ್ಲವೆಂಬಂತಿಹ
ಬಣ್ಣ ಧರಿಸಿ
ಹೊರ ನೆಲದ
ತತ್ವವೆಂಬರಯ್ಯಾ
ನಿಮ್ಮ ಜನ್ಮವು
ವ್ಯರ್ಥವಾಯಿತಲ್ಲವೆ
ಟೀಕೆ ಡೊಂಬರಾಟದಲಿ
ನಮ್ಮ ಮನೆಯ
ಮಾತಿನ ಸತ್ಯ
ತಿಳಿಯದಾದಿರಯ್ಯಾ..

ಭಾನುವಾರ, ಆಗಸ್ಟ್ 5, 2018

ನೀಲಿಯಾಕಾಶದಲ್ಲಿ
ಖಾಲಿಯಾಗದ ಮೋಡಗಳು
ನಭಕ್ಕೆ ಹೆಣೆಯುವ ಬಲೆಯಲ್ಲಿ
ಬಂದಿಯಾದ ನಾವುಗಳು
ಮೇಲೆ ಹಾರಲಾಗದೆ
ಕೆಳಗೆ ಇಳಿಯಲಾರದೆ
ಕೊಡುವ ಚಿತ್ರಕ್ಕೆ
ಕನಸ ಪತ್ರವು
ಮೇಲಿನಿಂದ ಬಿದ್ದಂತೆ
ಹಾಸಿಗೆ ಬಿಗಿದಿವೆ
ಬಾಹುಗಳೆರಡರಲಿ ಬಾಚುತ

ಕೆಸರಾಗುತಿವೆ ಗದ್ದೆಗಳೆಲ್ಲವು
ನೇಗಿಲೊಡೆದಿಹ ಮಣ್ಣಲಿ
ಹಸಿರಾಗಲು ನೆಲದೊಳು
ರೈತನೊಲವಿನ ಕಾಯಕ

ಹಸಿವ ತಣಿಸುವ ಮಂತ್ರವು
ಹೆಣೆದ ಉಲುಮೆಯ ತಂತ್ರವು
ನೀರನುಳಿಸುವ ಬದುವ ಕಟ್ಟುವ
ಬದುಕ ಕಟ್ಟಿದ ಸಂಸ್ಕೃತಿ..

ಬುಧವಾರ, ಆಗಸ್ಟ್ 1, 2018

ಸುರಿದಿರ್ದ ಮಳೆಹನಿಯ
ಲೆಕ್ಕಹಾಕೆಂಬರು
ಬರಗಾಲದ ಬಿಸಿಲ
ಡಿಗ್ರಿ ಸೆಕೆಯೆಂಬರು
ಪ್ರತಿಯೊಂದಕ್ಕೊಂದು
ಅಳತೆಯೆಂಬರು
ನಿನ್ನ ನಾಲಿಗೆಯ ನುಡಿ
ನಂಬರಯ್ಯ
ಬದುಕಿನಾಳವ ಎಂತೆಂದು
ಕೇಳರಯ್ಯ
ಸಾವ ಕೈಯಲ್ಲಿ ಪಿಡಿದು
ಬೊಬ್ಬಿಡುವರಯ್ಯ
ಪರಮಾತ್ಮನಳತೆಯಗೋಲು
ಈ ಜೀವ ಜೀವ..

ಶನಿವಾರ, ಜೂನ್ 16, 2018

ಕವಿತೆಯ ಸಾಲುಗಳು

ಪ್ರಾಸವಿಲ್ಲದೊಡೆ ರಸವಿರುವ
ಸರಸ್ವತಿಯು ನಾಲಗೆಯಲ್ಲಿರೆ
ಕಣ್ಣು ಮನಸುಗಳ ಸಂಗಮವದು
ನೋವು ನಲಿವುಗಳಿರಲು
ಕೊರೆವ ಮನಗಳಿಂದುದಿಸಿ
ಸಿಂಗರಿಸಿ ಬರೆವ ಪ್ರಾಸ ವಧುವದು
ನೀ ಹುದುಗಿರುವ ಸಾಲುಗಳು..

ಷಟ್ಪದಿ ಮಾತ್ರೆಗಳ ವಿಂಗಡಿಸಿ ಬರೆಯಲು
ಭಾವನೆ ಭಾವರ್ಥ ತಳತಳಿಸುತ್ತಿರೆ
ಕವಿ ಜಾಣ್ಮೆಯಿಂದಾಗುವುದು
ಏಕಾಂತ ಚಲನೆಯಲಿಂದು
ಪರಿಸರದ ಕಾಂತದಲೊಮ್ಮೆ
ಮನದ ಮಾತಾಗುವುದು
ನೀ ಹುದುಗಿರುವ ಸಾಲುಗಳು..

ಹೊಗಳು ಭಟನಿಲ್ಲದ ಭಾವದಲಿ
ಅವನಿವನ ನಿಜಕಲ್ಪನೆಗಳ ತೊಳಲಾಟ
ಜೀವ ಜೀವನದ ಸಾರವದು
ಕಬ್ಬಿಗನ ಬದುಕಿನೊಳ
ಪ್ರೀತಿ ಮಮತೆಗಳ ಜೇಂಕಾರ
ಉಬ್ಬು ತಗ್ಗುಗಳ ಅಹಕಾರವದು
ನೀ ಹುದುಗಿರುವ ಸಾಲುಗಳು ..

ಭಾನುವಾರ, ಮೇ 13, 2018

ಜಾರಿ ಹೋಗುವ ಮುನ್ನ

ಹೊಳೆವ ಕಂಗಳಿಂದು
ಹೊಳಪ ಕಳೆದುಕೊಂಡು
ಪ್ರೀತಿಯಿಂದ ಬೆರೆವ ಹೃದಯ
ಬೆಸೆದ ಬೆರಳ ಕಳಚಿಕೊಂಡು
ಒಂಟಿಯಾಗಿ ನಡೆದಿದೆ
ಮರಳ ಮೇಲೆ
ಮರುಳ ದಿಬ್ಬಣ
ಮರೆತು ಮುಂದೆ ಸಾಗಿದೆ

ಒಲವ ಅರ್ಥ ನಲಿವ ಮಾತು
ಮನಸಿನಿಂದ ಜಾರಿದೆ
ಛಲವು ಬಿಡದ ನೋವಿನಿಂದ
ಕಣ್ಣ ತುಂಬ ನೀರಿದೆ
ಬದುಕು ನೀನು ಸುಖಕೆ ಮಾತ್ರ
ಕಷ್ಟ ಯಾರಿಗೆ ಬೇಕಿದೆ
ಪ್ರೀತಿ ಒಲುಮೆ ನೆಪಕೆ ಬಂದು
ನಿನ್ನ ಸಂಗಂಡ ನಿಂತಿದೆ

ನೂರು ಕನಸಿನ ಎರಡು ಜೀವ
ಹಲವು ದಿನಗಳ ಮಧುರ ಮಾಯೆ
ನಿನ್ನ ಮುಂದೆಯೆ ಸುಡುತಿವೆ
ಪ್ರವಾಹದಂತೆ ಎಗರಿದೆ

ಸೋಮವಾರ, ಮೇ 7, 2018

ಪ್ರಜಾಪ್ರಭುತ್ವ

ಬದುಕಿಗಾಗಿ ನನ್ನಾಧಿಕಾರವನು
ನಿನಗೆ ಅರ್ಪಿಸುವೆನು
ರಕ್ಷಣೆ ಸಮರ್ಪಣೆ ನೀ
ಮಾಡುವೆನೆಂದು
ಹೇಳಿರುವರು ತಾತ್ವಿಕರು
ಹಕ್ಕುಗಳ ರಾಶಿಯದು
ಸೇರಿದ ಪ್ರಭುತ್ವವಿದು

ಕಾವವನು ಅಧಿಕಾರವನು
ಸಮಾಜದ ಏಳಿಗೆಗಾಗಿ
ರಾಜ್ಯದ ಕಲ್ಯಾಣಕ್ಕಾಗಿ
ಮೀಸಲಿಡುವವನಾಗಿ
ನಮಗೊಳಿತು ಸರಿ ನಡೆಗೆ
ನಮಗಳಿವು ಅರಿ ದ್ವೇಷಕ್ಕೆ
ಕಷ್ಟ ನಷ್ಟದಲಿ ಬಂದು
ಬಂಧುವಾಗು ದೊರೆಯೆ

ಸಮಾಜದ ನಲಿವಿನಲಿ
ನಮ್ಮ ಸಂಸಾರದಲ್ಲಿ
ನಮ್ಮವನಾಗಿ ಯೋಚಿಸು
ಅನಿವಾರ್ಯಕ್ಕೆ ಯೋಜಿಸು
ಕೆಡುಕಿರಲು ಜನರಲ್ಲಿ
ಮೂಢನಂಬಿಕೆ ಮರಳಿ
ಸಂಹರಿಸು ಕಾಯ್ದೆಯಲಿ
ದೇಶದೋಷವ ಕಳೆಯಲು

ಹಣ ಚೆಲ್ಲಿ ಯಾಚಿಸದಿರು
ಮತ ಬೇಟೆಯಲ್ಲವದು
ದ್ವೇಷ ಭಾವದ
ಡೊಂಬರಾಟವು ಸಲ್ಲದು
ಸಹಕಾರ ಸಂಬಂಧ
ಅಭಿವೃದ್ಧಿ ಅಭಿಪ್ರಾಯ
ಸರ್ವರ ಶಕ್ತಿಯದು
ನೀ ಪ್ರತಿನಿಧಿಯಾಗುವುದು

ಬುಧವಾರ, ಮಾರ್ಚ್ 21, 2018

ಬದುಕ ಕವಿತೆ

ಹಿತವಾದ ಮಾತಿರಲು
ಸತಿಯೊಲವಿನ ಸ್ನೇಹ
ಮಗುವಿನ ನಗುವಿರಲು
ಮತ್ತಿಲ್ಲ ಹೆಚ್ಚಿನ ದಾಹ
ಮನೆಯೊಳಗೆ ನಾನಿರುವೆ
ಮನದೊಳಗೆ ನೀನಿರುವೆ..
ಓ ಕವಿತೆ..

ನಿನ್ನೊಲವು

ನೀತಿಯ ಪಾಠದಲ್ಲಿ
ಹುಸಿ ಕೋಪ ಕೊಂಚ
ಜೊತೆಗಿರುವ ಮಾತಲ್ಲಿ
ನೀನಗೇನೊ ಸಂಕೋಚ
ನಾನೊಮ್ಮೆ ಮರೆಯಾದರೂ
ನಿನಗೇನೂ ಆತಂಕ

ಸೋಮವಾರ, ಮಾರ್ಚ್ 19, 2018

ಕಲ್ಯಾಣದ ಕೂಗು

ಧರ್ಮ ಕರ್ಮಗಳ
ಅಣಕಿಸಿ ಭಂಜಿಸುವ
ರಾಜಕೀಯ ಸರದಾರರ
ನೆಚ್ಚಿ ಕಚ್ಚಾಡುವ
ಕಾಯಕ ವ್ಯಾದಿಗಳೆ

ನಿಮಗೆಲ್ಲಿ ಅರ್ಥವಾಗುವುದು
ರಾಜಕೀಯ ತೊರೆದ
ಧರ್ಮ ಜೀವನದ
ಚಿಂತನಾ ಚಾವಡಿಯ
ಶಿವಶರಣರ ನಡೆ

ಜಾತಿಯಿಂದ ಜಾತನಲ್ಲ
ಚಿಂತನೆಯು ಪುಟಿದೇಳಲು
ನಿನ್ನ ಹೊಸಹುಟ್ಟು
ಶಿವ ಭಕ್ತರಿಗದು ಲೌಕಿಕ
ಸ್ವರ್ಗದಂತಿವುದು ಅರಿತರೆ
ತನ್ನರಿದವನಿಗೆ ಕೇಳಿಸದು
ಕಲ್ಯಾಣದ ಕೂಗು