ಶುಕ್ರವಾರ, ಅಕ್ಟೋಬರ್ 30, 2020

ನೀತಿಯಿಲ್ಲದ ರಾಜಕೀಯ



ನಮ್ಮವರೆಂದು 
ಭಾವ ಸೆಳೆತದೊಳು
ಬಂಧುತ್ವವನು ಬೆಸೆದು
ಸಿದ್ಧಾಂತ ವಿಚಾರಗಳಿಗೆ
ಜೀವ ನೀಡುವ ನಾಯಕನೆಂದು
ಹಸಿ ಸುಳ್ಳ ಬಿಗಿದೊಡೆ

ವಿರೋಧಗಳ ಲೆಕ್ಕಿಸದೆ
ಎದೆಕೊಟ್ಟು ರಸ್ತೆಯಲಿ
ತನ್ನವರನ್ನೆ ಭಾವೋದ್ರೇಕದಿ
ವೈರಿಗಳಂತೆ ಕಾಣುವ
ಕಾರ್ಯಕರ್ತರ ಏನಂಬೆನು
ತಾ ಮೂರ್ಖನು ಬುದ್ಧಿ ಹೀನನೊ

ನಾನು ನಾನೆಂದು
ನನ್ನ ಕುಟುಂಬವೆಂದು
ಸೋಲು ಬೆಂಬತ್ತಿದರೊ
ಬದುಕಲು ದಾರಿಯದು
ಅಲ್ಲಿ ಇಲ್ಲಿ ನಾಳೆ ಇನ್ನೆಲ್ಲೊ
ನಾನಿರುವುದೇ ನಾಲಗೆಯಲ್ಲಿ

ಕೋಟಿ ವ್ಯೂಹದೊಳು
ಹಿಂಬಾಗಿಲ ಹಿಂಬಾಲಿಸಿ 
ಸ್ವಾರ್ಥದಿ ಬಂದವನ ಸೇರಿ
ಇದ್ದವನು ಬೊಬ್ಬಿಡುವ
ನೋಡಿ ಇವ ನಮ್ಮ ನಾಯಕ
ನೋಡಿ ಇವ ಹೊಸ ನಾಯಕ

ಗುರುವಾರ, ಅಕ್ಟೋಬರ್ 22, 2020

ಯಮಪಾಶವಿದು ಕರುಣೆಗೆ ಕರಗದು ವಿಧಿಯೇ
ಕಲಿಯುಗದ ಸಾವಿತ್ರಿಯ ಕೂಗು ಸತಿಗಾಗಿಯಲ್ಲ
ಇಹದ ಪ್ರೀತಿಯಲ್ಲೆ ಮರುಗುತಿಹ ದುರ್ವಿಧಿಯೇ
ಕಾಂಚಾನದಾಸೆಯೊಳು ರೋಗ ವ್ಯಥೆಗಾಗಿಯೇ ಎಲ್ಲ

ಭಾನುವಾರ, ಅಕ್ಟೋಬರ್ 11, 2020

ಕೃಷ್ಣ ಕೃಷ್ಣ ಎಂದೆನುತಾ
ದಾರಿಯೊಳು ಬಿದ್ದಿಹ
ಪರಿಜಾತವು ಪರಿತಪಿಸಲು
ಇಬ್ಬರ ಸಂತೈಸಿದವ
ಸುಖದುಃಖಗಳ ಎಲ್ಲರೊಳಿಟ್ಟು
ಮರೆಯಾದೆಯಾ ಮಾಧವ..

ಪರರದು ನನ್ನದು ನಿನ್ನದು ಎನ್ನದೆ
ಎಂದೆನುತಾ ಸ್ವಾರ್ಥದೊಳು
ಎಲ್ಲರ ಮನೆಯೊಳು
ಸತ್ಯಭಾಮೆ ರುಕ್ಮಿಣಿಯಿರಲು
ಯಾವ ಬಾಣದೊಳು
ಸೆರೆಯಾದೆಯೋ ಮಧುಸೂದನ..

ಆಸೆ ತುಂಬಿದ ಬುತ್ತಿಯೊಳು
ಜೀವನ ಬತ್ತುತ್ತಿರಲು
ನಿನ್ನ ವಾಣಿ ಕೇಳಲಾಗದ ಜೀವವು
ಸಾವಿನಿಂದಲೇ ಹಾರಿತೋ
ದೇಹ ಮಣ್ಣೊಳು ಸೇರಿತೋ
ಹೇ ಆದಿ ಕೇಶವನೇ..