ಭಾನುವಾರ, ನವೆಂಬರ್ 13, 2022

ನೀಲ ಕೇಶವನು ಬಾಚಿ

ಮಲ್ಲಿಗೆಯ ಮುಡಿದು

ಸಿಂಗರಿಸಿ ಕುಳಿತೆ ಏಕೆ

ನೀಲಾಂಬರಿ ನೀ..

ತಿಳಿನೀರ ಕೆರೆಯಲಿ 

ನಿನ್ನ ಸೌಂದರ್ಯವನು

ನೀಲಕಾಶದೊಡೆಯ ರವಿ

ಮಾತ್ರ ಸವಿಯುವನೇನೆ..


ಚಹರೆಯೊಳು ಸಿಂಧೂರ

ಗಂಭೀರದಾಲೋಚನೆ 

ಬಿಂದಿಗೆಯೊಳು ನೀರ

ತುಂಬಿದೆಯಲ್ಲೇ

ಶೃಂಗಾರ ಭಾವದೊಳು

ಎನ್ನ ಸೂರೆಗೈವ

ನಿನ್ನ ಮುಂಗುರಳ

ಸರಿಸಿ ನೋಡಬಾರದೇಕೆ..


ನೀಲ ಕಂಗುತೆಂಗುಗಳ 

ಬಿಳಿಸೀರೆ ಸರಿದು 

ಮುಂಜಾವ ಕಿರಣದಂತೊಳೆವ 

ಕಾಂತಿಯ ಚೆಲುವೆ

ಕನಸ ಜೋಳಿಗೆಯ ತುಂಬಿ 

ಕೈ ಹಿಡಿದು ನಡೆಯೋಣ

ಬಾ ಎನ್ನ ಬಾಳಿಗೆ

ಓ ಚೆಂದ ಬಾಲಿಕೆಯೆ...



ಹೊಸ ಭಾಂದವ್ಯಕ್ಕೆ
ಮುನ್ನುಡಿಯನ್ನು ಬರೆಯೋಣ||೨||
ನಲಿ-ಕಲಿ ಜತೆಯಲಿ
ಮುಂದಡಿಯನ್ನು ಹಾಕೋಣ||೨||

ತನುಮನ ಶುಚಿಯಾಗಿಡಲು
ಚಿಗುರುವ ಮನಸಿಗೆ
ಬದುಕಿನ ಮೌಲ್ಯವ
ಅರಳಿಸೋ ವಿದ್ಯೆಯ ಕಲಿಸೋಣ||೧||
ಪರಿಸರ ನಂದನವನವಾಗಿಸಲು
ಸ್ವಚ್ಛತೆ ಅನುಭವ ಪಾಠವ ಮಾಡಿ
ಹೂವಿನ ಮನಸುಗಳಲ್ಲಿ 
ಪರಿಸರ ಸೂಕ್ಷ್ಮತೆ ಪಸರಿಸೋಣ ||೧||

ಸಾಹಸ ಮೆರೆದಿಹ ಇತಿಹಾಸ
ಚೆಲುವಿನ ತಾಯಿ ನುಡಿ ಕನ್ನಡ
ಸಮರಸ ಬಾಳ್ವೆಯ ಬೆಳಕುಗಳು 
ನಾಳೆಯ ಬದುಕಿನ ಸೋಪಾನ ||೧||
ಬಣ್ಣದ ಮಾತಿನ ಮರ್ಮಗಳು 
ಮನುಕುಲ ಕಲಕುವ ದ್ವೇಷಗಳು
ದೇಶವ ಸುಡುವ ಕವಲುಗಳು
ಎನ್ನುವ ಸತ್ಯವ ಪಠಿಸೋಣ ||೧||

ಮನೆಮನ ಬೆಸೆಯುವ ಬಂಧವನು 
ತುಂಬುವ ಮುದ್ದಿನ ನಗುವಾಗು 
ಬೋಧನೆಗೈಯುವ ಗುರುಗಳಿಗೆ
ವಿನಯದಿ ವಂದಿಸೋ ಮಗುವಾಗು ||೧||
ನಿನ್ನೊಳು ಉದಿಸುವ ನೋವಿಗೆ 
ಜ್ಞಾನದ ಜ್ಯೋತಿಯೆ ಸಾಂತ್ವನ
ಎನ್ನುತ ಮಕ್ಕಳ ಬೆಳೆಸೋಣ
ಭವಿತವ್ಯಕ್ಕೆ ಕನ್ನಡಿ ಹಿಡಿಯೋಣ ||೧||



ಭಾನುವಾರ, ಅಕ್ಟೋಬರ್ 30, 2022

ಹೆಣ್ಣು ಮಾಡಿದರೆ ತಪ್ಪು.. ಗಂಡು ಮಾಡಿದರೆ ತಪ್ಪಲ್ಲ.. ಭಲೇ ರಾಜಕೀಯ 
ಧನ್ಯೋಶ್ಮಿ ಭಾರತಾಂಬೆ
ತಾಯಿ ಭಾರತೀಯ ಪಾದ ಪದ್ಮಗಳ ಯಾವ ಕೈಯಲ್ಲಿ ಪೂಜಿಸುತ್ತೀರಿ..
ಅಣ್ಣ ಅಂತೆ ಅಣ್ಣ.. ಸಮರ್ಥಕರ ಏನನ್ನಬೇಕೋ ಶಿವ ಶಿವಾ.. ! 

ಅಮೃತವನು ಉಣಬಡಿಸುವ
ಮುಳುಗೇಳುತಿರುವ ಭರವಸೆಗಳಲಿ
ವಿಷಕಾಲಸರ್ಪವನು ಮಥಿಸುತ್ತಿರೆ
ವಿಷಜಂತುಗಳಂತೆ ವರ್ತಿಸುತಿಹರಿವರು
ಇವರ್ಯಾವ ಸೀಮೆ ನಾಯಕರು

ಅರಿಷಡ್ವರ್ಗವನು ಹದಗೊಳಿಸದವ
ಸಂಘ ನಾಮವ ಹಣದಿಂ ಕೊಂಬನೆ
ಕಾಮಕ್ಕಾಗಿ ಬಳಸುವ ವಸ್ತು ಹೆಣ್ಣೆಂಬನೆ
ನಾಲಗೆಯ ಹರಿ ಬಿಡುವವನು ಮರೆತನೆ
ದುರ್ಗಾ ಕಾಳಿ ಪ್ರತಿ ಮನೆಯ ಕನಸದು
ಭವ್ಯ ಭಾರತದ ನಾರಿ ಶಕ್ತಿಯಿದು
ಪದೇ ಪದೇ ಎಡವಿಕೊಳ್ಳುತ್ತಾ
ಜನರ ಅಪನಂಬಿಕೆಗೊಳಿಸದಿರಣ್ಣ
ಇಲ್ಲಿ ಮಾಡಿದಾ ಕಾರ್ಯಗಳಿಗೊಂದು
ಫಲ ಅನುಭವಿಸುವುದಲ್ಲಿ
ವೇದ ವೇದಾಂತಿಗಳೆಂಬರು
ಆದರೆ ಬಸವ ನುಡಿದಂತೆ 
ಇಹದ ಕರ್ಮಫಲ ಭಂಜಿಸುತಿಹುದೆನ್ನ
ಬಸವಳಿದ ಬದುಕನು ಈ ಜನ್ಮದಲಿ

ಭುವಿಯೊಡೆದು ತಿರುಳ ಬಗೆದವರ
ಆಕಾಶವನು ಕಾಯದಿಂದಲೆ ಮುಟ್ಟಿದ
ಮನ ತಟ್ಟದ ದೇಹವನ್ನೊಪ್ಪದ
ಅರ್ಥವಿಲ್ಲದ ಮನುಜ ದಾಹವನು 
ಕ್ರಿಮಿಯನ್ನಿಟ್ಟು ಶಿವ ತಾನಾಡಿಸುತಿಹನು
ಸಂಗಮನೊಲಿಸುವ ಪರಿ ಮರೆತೆವಯ್ಯ

ನೆಪವಾಗುತಿಹೆ ನೀನು
ಅನುಭಾವವನು ದಿಕ್ಕರಿಸಿ ಸಮರ್ಥನೆಯನಪ್ಪಿ
ಸ್ವಾರ್ಥ ಭುಗಿಯಲಿ ಪಲ್ಲವಿಸಿ
ನಾಲಗೆಯ ಎಳೆವವರ ಬಂಧುವಂತೆ ನೀ
ರಾಜಕಾರಣಿಗಳ ಮತಗಳ ಮಮಕಾರವಂತೆ
ನೀ ತೊರೆದ ಐಶ್ವರ್ಯ ಮದದೊಳಗೆ
ನಿನ್ನ ತಮಗಾಗುವಂತೆ ಬನ್ನಿಪರಯ್ಯ

ನೆನಪಾಗುತಿಹೆ ನೀನು
ಜಾತಿ ಭಂಡರ ನೀತಿಯನುಟ್ಟ
ಧರ್ಮದಮಲಿನ ಭಯದಿ ಸುಡುವರ
ಅರಿಷಡ್ವರ್ಗದೊಳು ಹೊರಳಾಡುವ
ನರನಾಟಕವನು ಬಿಸುಟು
ಕೂಡಲ ಸಂಗದಲಿ ನಾನೂ ಇರಬೇಕಿತ್ತು

ಪೃಥ್ವಿರಾಜ್ ಜಿ

ಶೈವ ಪರ್ವತಗಳ ನಡುವೆ

ಕಾಠಿಣ್ಯ ತಪೋನಿರತನವನು

ದೇವ ಮೆಚ್ಚಿಸಿ ತನ್ನಿಚ್ಚೆಗೊಳಪಟ್ಟು

ಅವನನ್ನೆ ಪಡೆದು ಅಸ್ತಿತ್ವವನು ಕಳೆದು 

ಭಕ್ತಿಶಕ್ತಿಯಲಿ ಲಿಂಗವನು ಪಿಡಿದು

ಶಿವಾತ್ಮವೆಂದೆನುತ ಗಹಗಹಿಸಿ ನಗುತ್ತಾ 

ಅಸುರಾಪುರಕ್ಕೆ ನೀಲಾ ವಾರಿಧಿಯ ಕಲಕುತ್ತ 

ಪಯಣಿಸಿದನಾ ರಾವಣೇಶ್ವರನು 


ಕೈಲಾಸದ ಬಿಳಿ ತಿಳಿಯಾದೊಡೆ

ಇಳಿದ ಗಂಗೆಯೂ ಸಮುದ್ರ ಸೇರಿದೊಡೆ

ಖಾಲಿ ಹಿಮಪರ್ವತಗಳಲ್ಲೇನಿದೆ

ಯುದ್ಧ ಅಸ್ತ್ರಗಳು ಫಲಿಸದು 

ಓಲೈಕೆ ತಂತ್ರವೊಂದೇ ಉಳಿದಿಹುದು 

ಲಿಂಗವನು ತಾ ಪಡೆಯಲು 

ಎಂದೆನುತಾ ಇಳಿದು ಬೆನ್ನ ಪಿಡಿದನು 

ಪಿತೃ ವ್ಯಾಮೋಹಿ ವಕ್ರದಂತನು


ಮೊನಾಚದ ಕಲ್ಲ ಶಿಖರಗಳು 

ಹಸಿರ ಕಾನನದ ಸೊಬಗು

ನಡುನಡುವೆ ಹರಿವ ಜಲವು

ನಿತ್ಯಕಾಯಕವ ಮುಗಿಸಿ

ಜಲಧಿಯೊಳ್ ಇಳಿದ ಅರುಣಾವರ್ಣನು

ಲoಖಾಧಿಪತಿ ತಾ ದ್ವಿಜನಾಗಿರಲು

ಅರ್ಕನಿಗೆ ಸಂಧ್ಯಾ ವಿದಾಯ ಹೇಳದಿರನೆ

ಅತ್ತಿತ್ತ ನೋಡುತ್ತಾ ಯೋಚಿಸ ತೊಡಗಿದ 

ಕೆಳಗಿಟ್ಟರೆ ತಪಾಸೆಲ್ಲಾ ನೆಲ ಸೇರುವುದು




ಶುಕ್ರವಾರ, ಜುಲೈ 8, 2022


ಶಾಂತ ಜೀವದ ತೊರೆಯ 
ಕಲಕುವ ಕಲ್ಲು ನೀನಾಗಿಹೆನು
ನಿನ್ನ ತೊರೆದವುಗಳೆಲ್ಲ
ಮೆರೆಯುತಿವೆ ನೋಡು

ಸುಡುವಾಗ್ನಿ ಮಾತುಗಳ 
ಬಾಣ ಹೂಡಿದವರಾರೆನುತ
ಪದೇ ಪದೇ ಚಿಂತಿಸದೆ
ಹಿಂತಿರುಗಿ ನೋಡದಿರೆ

ವೈರವನು ಉಣಬಡಿಸುವ
ಮತತತ್ವಗಳಮಲೇರಿ
ಜೀವಾಗ್ನಿಯೊಳು ಬೆಂದು
ನಿನ್ನ ದೇಹ ನೆಲವನಯಪ್ಪುವುದು

ಒಂದೇ ಜನ್ಮವಿವುದೆನ್ನುತಾ
ಬಂಧು ಬಾಂಧವ್ಯ ಪಡೆದವನು
ನಡುದಾರಿಯಲಿ ಕೈ ಚೆಲ್ಲಿದಾ
ಎಂದೆನುತಾ ಕೊರಗಬಹುದೇನೋ..

ನೆತ್ತರ ಸುದೆಯು ಹರಿದಿದೆ ನೋಡ
ದೇಶದಗಲಕ್ಕೂ ಕ್ಷಣದಲಿ ತಲುಪಲು
ಬಿತ್ತರಗೊಂಡಿದೆ ಮತಾಂಧ ಮೋಡ
ಮತ್ತೆ ಎಲ್ಲಿ ಸುರಿಯಲು ಎಲ್ಲಿ ಮೆರೆಯಲು
ಯುವ ಮನದೊಳಗೆಲ್ಲ ಗಡಗಡ

ಶುಕ್ರವಾರ, ಜೂನ್ 10, 2022

ನನ್ನ ಸಂಗತ ಸವಿಯಲು
ನಿನ್ನ ಮೌನವ ತಾಳೆನು...

ಕಡಲ ತೆರೆಯಿದು
ಒಡಲ ಕರೆಯಿದು
ಬೆರಳು ಬೆರಳಿಗೆ ಚುಂಬನ
ನಿನ್ನ ಕೊರಳಲಿ ಬಂಧನ..

ತುಂಬಿಕೊಂಡಿವೆ ದಾಹವು
ಉಬ್ಬುತಗ್ಗುಗಳೆರಡು ದೇಹವು
ಒಂದೆ ಪ್ರೀತಿಯ ಪಥವಿದು
ನಮ್ಮ ಜೀವನ ರಥವಿದು..

ಬಾನಿನೆತ್ತರ ಹಾರೊ ಕನಸಿಗೆ
ಜೇನಿನತ್ತಿರ ಸುಳಿವ ಮನಸಿಗೆ
ಗೆಳತಿ ನಿನ್ನದೇ ರೂಪವೂ
ಬಾಳ ರಾತ್ರಿಯ ದೀಪವೂ..

ಗುರುವಾರ, ಜೂನ್ 2, 2022

ದಯೆ ಇರಲಿ ಪ್ರಾಣಿಗಳಲ್ಲಿ..
ದಯೆಯೆ ಧರ್ಮದ ಮೂಲವಯ್ಯ...
ದಯೆ ಇರಲಿ ಪ್ರಾಣಿಗಳಲ್ಲಿ..
ದಯೆಯೆ ಧರ್ಮದ ಮೂಲವಯ್ಯ...
ಬಂಜಿಸಿ ಅರ್ಜಿಸುವ ಮಾಂಸವಿರಲು ಕ್ಷಣಕ್ಕೆ..
ಬದುಕಿದ್ದರೆ ನಿನ್ನಿಂದ
ನಿನ್ನ ಕೃಪೆಯಿಂದ
ದಯೆ ಇರಲು
ದೇವನೊಳಿವನು ನಿನಗೆ
ನಿನ್ನ ನಂಬಿದ ಜನಕೆ...

ಗುರುವಾರ, ಮಾರ್ಚ್ 24, 2022

ತುಂಬಿರುವ ಧೂಳ ದುರುಳ ಬದುಕನು
ಇಳೆಯ ತಂಪಿನಿಸಿ ತೊಳೆವ ಮಳೆಯಂತೆ
ಪುಟಿದೇಳುವ ನವ ಉತ್ಸಾಹ ಸುಖದುಖವನು
ಸಮ ಚಿತ್ತದಲ್ಲಿರಿಸಿ ಬೆರೆವ ಮನದಂತೆ
ಹೊಳೆವ ಕಂಗಳಲಿ ಬೆಳೆವ ಕನಸಗಳನು
ನನಸಾಗಿಸಲು ಬಾಗಿರುವ ತೆನೆಗಳಂತಿರುವ
ಪರಿಶುದ್ಧ ಸಂಗಡವನು ನೀ ಸೇರು

ಭಾನುವಾರ, ಜನವರಿ 9, 2022

ಕಾಡುತಿವೆ ಮೌನವನು
ಕಡಲ ತೀರದ ಗಾಳಿ
ಕಿವಿಗಚ್ಚುತ ತನು ತಂಪಾಗಿಸುತಾ
ಮುಳುಗುತಿವೆ ಮನಸುಗಳು
ನೆನಪುಗಳ ಸುಳಿಯಲಿ
ಅಲೆಗಳಂತೆ ಅಲೆಮಾರಿ..

ಮತ್ತೆ ಸಂಭವವೇನೊ
ಮುನಿಸಿಲ್ಲದ ಜೀವನದ
ನೀರ ನಡಿಗೆ
ನಿನ್ನ ಮನದ ಗುಡಿಗೆ..

ಮೀಟುವ ವೀಣೆಯ ಸ್ವರವಿಲ್ಲ
ದಾಟುವ ಹೆಜ್ಜೆಯ ನೆನಪಿಲ್ಲ
ಹಸಿಯಾಗಿದೆ ಮರಳು ಮರುಳು
ಕೂಗಿ ಕರೆದರೂ ಕೇಳದಂತೆ
ಗರಿಗೆದರಿದೆ ಬೆವರಿಳಿಸಿದೆ
ಪಶ್ಚಿಮದ ತಂಗಾಳಿ..

ಮತ್ತೆ ಸಂಭವವೇನೂ 
ಮುನಿಸಿಲ್ಲದ ಜೀವನದ
ನೀರ ನಡಿಗೆ
ನಿನ್ನ ಮನದ ಗುಡಿಗೆ..

ಪ್ರೀತಿ ತುಂಬಿರಲು ಒಂದೇ ದಿಕ್ಕು
ರೀತಿ ನೀತಿ ಬೇರೆಯದೆ ಬದುಕು
ಕಾಣದಂತಹ ನೋವುಗಳನು
ಮೊದಲೆ ಊಹಿಸಲಾರರೇನು
ಅರ್ಥ ಮಾಡದ ಸಪ್ತಪದಿಯು
ಸುಪ್ತ ದಿಕ್ಕಿನಲ್ಲಿ ಚಲಿಸದೇನು

ಮತ್ತೆ ಸಂಭವವೇನೂ 
ಮುನಿಸಿಲ್ಲದ ಜೀವನದ
ನೀರ ನಡಿಗೆ
ನಿನ್ನ ಮನದ ಗುಡಿಗೆ..