ಭಾನುವಾರ, ಫೆಬ್ರವರಿ 28, 2021

ಸೇರುತಿಹುದೆಲ್ಲವು ನಿನ್ನೆದೆ..

ಮರದ ಬೇರಿನ ಋಣದ ಬೆವರಲಿ
ಹನಿವ ನೀರಿನ ಕಣದೊಳು
ಹಸಿರ ಬನದೊಳು ನಾಗನಡೆಯೊಳು
ಹರಿವ ತೊರೆಯು ನಿನ್ನದು
ಧುಮುಕಿ ನೆಗೆಯುವ ಹಾಲ ನಗೆಯು
ನಭಕ್ಕೆ ಚೆಲ್ಲುತ ತಂಪಿಡುತಿರೆ
ಕೃಷ್ಣ ಕೃಷ್ಣ ಕೃಷ್ಣ ಎನ್ನುತಿವೆ ಕಾಡೊಲು
ಭಜಿಸೆ ನಾಮವು ಪ್ರಾಣಿ ಸಂಕುಲದೊಳು

ತಾಳ್ಮೆ ಕಳೆದ ದೇಹದಾಹದಸಿವು
ಬಾಯರಿ ನಿನಗೆ ಸೋತು
ನಿನ್ನ ಭಕ್ತಿ ಅರಳಿಸಿವುದೆನ್ನೆದೆ
ಚಿಗುರಿದೊಲುಮೆಯ ಉಳುಮೆಗೈಯುತಾ
ನಿನ್ನತನದಿ ತೂಗಿದಾ ತೆನೆ
ಸೇರುತಿವುದೆಲ್ಲವು ನಿನ್ನೆದೆ
ಕೃಷ್ಣಾ... ಸೇರುತಿಹುದೆಲ್ಲವು ನಿನ್ನೆದೆ..

ಭಾನುವಾರ, ಫೆಬ್ರವರಿ 21, 2021

ಕುಂಡದೊಳಗ್ನಿಗೆ ಸರ್ವ ಸಮರ್ಪಿಸಿ
ಹೋಮ ಹವನವ ಮಾಡಿದವಗೆ
ಅರಿಷಡ್ವರ್ಗಗಳ ಆಟಟೋಪವು
ಒಳಗೊಳಗೆ ಕುದಿಯುತಿರೆ
ಇನ್ನೇಗೆ ಸಿಗುವೆಯೋ ರಂಗಾ..

ಸತ್ಯ ಸಮರಸ ಬದುಕ ಬಳ್ಳಿಗೆ
ನಿತ್ಯ ವಿರಸದ ಸುಳ್ಳ ಕಟ್ಟುವ
ಜಾತಿ ಸಂಗದಿ ಬಂಧ ಹೊಂದುವ
ನರ ವ್ಯಾಮೋಹದೊಳಗಿರೆ..
ನಿನ್ನ ಕಾಣಬಲ್ಲನೆ ನರಹರಿಯೇ..

ಕಳ್ಳ ದಾರಿಯ ನೆಚ್ಚಿ ಬದುಕಿದವ
ಸ್ವರ್ಗದಾಸೆಯ ಬಯಸುತಿರೆ
ಒಳಹೊರದ ಅಂತರವು ಹೆಚ್ಚಿರೆ
ಉಳ್ಳ ಸತ್ವಶಕ್ತಿಯ ಕಳೆದು
ಬೆತ್ತಲಾಗನೇನು ಶ್ರೀ ಹರಿಯೇ

ಧರ್ಮವನು ಮೌಢ್ಯಗಳಿಂದ ಸ್ತುತಿಸಿ
ಅಂತರಂಗದೊಳು ಜಾಢ್ಯವನಪ್ಪಿ
ಗೀತ ಸಾರವನು ಅರಿಯದೆ
ಗಂಟೆ ಜಾಗಟೆ ಆರ್ಭಟ ಕಿವಿಗಚ್ಚುತಿರೆ
ಸುಮ್ಮನಾದೆಯಾ ಮುರ ಹರಿಯೇ..

ತೊಳಲಿ ಬಳಲಿದ ಬದುಕ ನೋವು
ಸೇರಿ ಸಾಗರವಾಗುತಿರೆ
ಹಸಿವು ತುಂಬಿದ ಜೀವದ
ಋಣವು ನಿನ್ನದಾಯಿತೆ ಕೃಷ್ಣ ...
ಋಣವು ನಿನ್ನದಾಯಿತೆ..