ಬುಧವಾರ, ಮೇ 26, 2021

ಹರಿಯ ವರವಿರೆ 
ಸಹಸ್ರ ಬಾಹುಬಲನಿವ
ಅಧಿಕಾರ ಮದವನು 
ತಲೆಗೇರಿಸಿದವ
ಅಹಂಕಾರ ತುಂಬಿ
ಪರಶುವಿಗೆ ಶರಣಾದ..

ಹೆಸರಿಟ್ಟ ಕೂಡಲೇ 
ಅರ್ಜುನನಾಗಲಾರ
ಭುಜಬಲ ಮಾತ್ರದಿ
ಕ್ಷತ್ರಿಯನಾಗಲಾರ
ಮದತುಂಬಿದವನು
ಪ್ರಜಾಪತಿಯಾಗಲಾರ

ಶರಣಾಗು ಆತ್ಮೀಯರೊಳು
ವರವಾಗು ದೀನದಲಿತರೊಳು
ಮಗುವಾಗು ತಾಯ ಮಡಿಲೊಳು
ರಕ್ಷಕನಾಗು ರಾಕ್ಷಸ ಪ್ರವೃತ್ತಿಯೊಳು
ಯುಗ ನೆನೆವುದು ನಿನ್ನ
ಮಣ್ಣ ಸೇರಿದ ಕೊನೆಗೆ

ಭಾನುವಾರ, ಮೇ 16, 2021

ಈ ಮುಂಜಾವಿನ ಮಂಜಿನಲಿ
ಸೂರ್ಯ ಕಿರಣ ಸೋಕಲು
ಹಸಿರ ಎಲೆಯು ಬಾಗಿದೆ
ಹನಿಯ ಭಾರದಿ ಧರೆಯ ಸ್ಪರ್ಶಕ್ಕೆ
ಈ ಮಣ್ಣ ಕಣವು ಕಾದಿದೆ

ಪುಟ್ಟಿದಾ ಜೀವಗಳಿಗೊಂದು 
ಸಂಬಂಧ ಸರಪಳಿಯ ಹೆಸರಿದೆ
ಯವೌನ ಮುಪ್ಪು ಬದುಕ ಪಯಣ
ಬರುವ ಸಾವ ಕೊಂಡಿಯನು
ಈ ಮಣ್ಣ ಕಣವು ಕಾದಿದೆ

ಶುಕ್ರವಾರ, ಮೇ 14, 2021

ಇಲ್ಲಿ ಮಾಡಿದಾ ಕಾರ್ಯಗಳಿಗೊಂದು
ಫಲ ಅನುಭವಿಸುವುದಲ್ಲಿ
ವೇದ ವೇದಾಂತಿಗಳೆಂಬರು
ಆದರೆ ಬಸವ ನುಡಿದಂತೆ
ಇಹದ ಕರ್ಮಫಲ ಭಂಜಿಸುತಿಹುದೆನ್ನ
ಬಸವಳಿದ ಬದುಕನು ಈ ಜನ್ಮದಲಿ

ಭುವಿಯೊಡೆದು ತಿರುಳ ಬಗೆದವರ
ಆಕಾಶವನು ಕಾಯದಿಂದಲೆ ಮುಟ್ಟಿದ
ಮನ ತಟ್ಟದ ದೇಹವನ್ನೊಪ್ಪದ
ಅರ್ಥವಿಲ್ಲದ ಮನುಜ ದಾಹವನು
ಕ್ರಿಮಿಯನ್ನಿಟ್ಟು ಶಿವ ತಾನಾಡಿಸುತಿಹನು
ಸಂಗಮನೊಲಿಸುವ ಪರಿ ಮರೆತೆವಯ್ಯ

ನೆಪವಾಗುತಿಹೆ ನೀನು
ಅನುಭಾವವನು ದಿಕ್ಕರಿಸಿ ಸಮರ್ಥನೆಯನಪ್ಪಿ
ಸ್ವಾರ್ಥ ಭುಗಿಯಲಿ ಪಲ್ಲವಿಸಿ
ನಾಲಗೆಯ ಎಳೆವವರ ಬಂಧುವಂತೆ ನೀ
ರಾಜಕಾರಣಿಗಳ ಮತಗಳ ಮಮಕಾರವಂತೆ
ನೀ ತೊರೆದ ಐಶ್ವರ್ಯ ಮದದೊಳಗೆ
ನಿನ್ನ ತಮಗಾಗುವಂತೆ ಬನ್ನಿಪರಯ್ಯ

ನೆನಪಾಗುತಿಹೆ ನೀನು
ಜಾತಿ ಭಂಡರ ನೀತಿಯನುಟ್ಟ
ಧರ್ಮದಮಲಿನ ಭಯದಿ ಸುಡುವರ
ಅರಿಷಡ್ವರ್ಗದೊಳು ಹೊರಳಾಡುವ
ನರನಾಟಕವನು ಬಿಸುಟು
ಕೂಡಲ ಸಂಗದಲಿ ನಾನೂ ಇರಬೇಕಿತ್ತು

ಪೃಥ್ವಿರಾಜ್ ಜಿ

ಬುಧವಾರ, ಮೇ 5, 2021

ಸೇರುತಿಹುದೆಲ್ಲವು ನಿನ್ನೆದೆ..

ಮರದ ಬೇರಿನ ಋಣದ ಬೆವರಲಿ
ಹನಿವ ನೀರಿನ ಕಣದೊಳು
ಹಸಿರ ಬನದೊಳು ನಾಗನಡೆಯೊಳು
ಹರಿವ ತೊರೆಯು ನಿನ್ನದು
ಧುಮುಕಿ ನೆಗೆಯುವ ಹಾಲ ನಗೆಯು
ನಭಕ್ಕೆ ಚೆಲ್ಲುತ ತಂಪಿಡುತಿರೆ
ಕೃಷ್ಣ ಕೃಷ್ಣ ಕೃಷ್ಣ ಎನ್ನುತಿವೆ ಕಾಡೊಲು
ಭಜಿಸೆ ನಾಮವು ಪ್ರಾಣಿ ಸಂಕುಲದೊಳು

ತಾಳ್ಮೆ ಕಳೆದ ದೇಹದಾಹದಸಿವು
ಬಾಯರಿ ನಿನಗೆ ಸೋತು
ನಿನ್ನ ಭಕ್ತಿ ಅರಳಿಸಿವುದೆನ್ನೆದೆ
ಚಿಗುರಿದೊಲುಮೆಯ ಉಳುಮೆಗೈಯುತಾ
ನಿನ್ನತನದಿ ತೂಗಿದಾ ತೆನೆ
ಸೇರುತಿವುದೆಲ್ಲವು ನಿನ್ನೆದೆ
ಕೃಷ್ಣಾ... ಸೇರುತಿಹುದೆಲ್ಲವು ನಿನ್ನೆದೆ..
ಭೋರ್ಗರೆಯುತಿವೆ ವರುಣಾನಾರ್ಭಟವು 
ಹೊನಲು ಬೆಳಕಿನ ರಂಗಿನಾಟವು
ಸುರಿವ ಹನಿಗಳಿಗೆ ಹಸಿರು ಬಾಗಿಹವು
ಇಳೆಯ ಕೊಳೆಯನು ತೊಳೆದು ಸಾಗಿಹವು

ನಟಿಸೋ ಡೋಂಗಿ ನಾಯಕರ ಹಿಂಡಲಿ 
ಸ್ವಾರ್ಥದಾಸೆಯ ಹಸಿದು ಕಸಿದ ಜೇಬಲಿ 
ಹರಿವ ಮಳೆಯು ಉಳಿಸೋ ಹಸಿರು ವಸುಂಧರೆಯು 
ಮನುಜ ಮನಸ್ಸನು ತಣಿಸದಾದುವು