ಭಾನುವಾರ, ಫೆಬ್ರವರಿ 23, 2020

ನನ್ನ ಹಡೆದ ನೋವ ದನಿಯು
ನಿನ್ನ ಕನಸ ಖುಷಿಯ ಗಣಿಯು

ಹೇಳಳಾರದೆ ತಾಳಲಾರದೆ
ಕಹಿಯ ನುಂಗಿರಲಾರದೆ
ಬಾಳ್ವ ಪರಿಯನು ನೆಚ್ಚಿದೆ
ಒಲುಮೆ ಕುಡಿಯಲಿ ಹೆಚ್ಚಿದೆ

ನಗುವ ನೋಡುವ ತವಕವು
ಮಗುವ ಮುದ್ದಿಸೋ ಪುಳಕವು
ಸರಿತಪ್ಪುಗಳೇನೆ ಇರಲಿ
ಜಗವೇ ಕಂದನಿಗಾಗಿರಲಿ

ಬೆಳೆದ ಗಿಡದಲಿ ತುಂಬಿ ಫಸಲು
ತಾಯಿ ತ್ಯಾಗವು ತಡೆದು ಬಿಸಿಲು
ಓ ಮಾತೃ ಹೃದಯವ ನೀಡಿದೆ
ನನಗೆ ಜೀವದಾನವ ಮಾಡಿದೆ

ಶುಕ್ರವಾರ, ಫೆಬ್ರವರಿ 21, 2020

ಮೂಗುತ್ತಿಯೊಂದು ಮುಂಜಾನೆಯಲಿ
ಬಾವಿಯ ರಾಟೆಯ ಹರಟೆಯಲಿ
ಮರಗಳ ಎಡೆಯಲಿ ತೂರಿದ ಬೆಳಕಲ್ಲಿ
ಹೊಳೆಯುತ್ತಿತ್ತು ರಾತ್ರಿಯ ಕಥೆಯ ಹೇಳುತಿತ್ತು

ಚದುರಿದ ಕೇಶವು ಗಾಳಿಗೆ ಬಾಗುತ್ತ
ಬೆರಳಲಿ ಮಡಿಯುತ
ಕಣ್ಣು ಒಂದೆಡೆ ಹಾಯುತ
ನಾಳೆಯ ದಿನಗಳ ಎಣಿಸುತಿತ್ತು
ಚೆಲುವ ಗುಣಿಸುತಿತ್ತು ನಾರಿ ನಾಚುತಿತ್ತು
ಬೀಸುತಿವೈ ಗಾಳಿ
ಯಾವುದೋ ದಿಕ್ಕಿನಲ್ಲಿ 
ಮಳೆ ಸುರಿದಿದೆ
ತಂಪಾಗಿಸಿದೆ ನೆಲವ 
ಎನ್ನುತಿವೆ ಮನವು
ಎನ್ನ ಹಗಲ ಕನವೋ

ನೋಡುತಿರುವ ಕಂಗಳು
ಮಂಜಾದರೂ ಮುಪ್ಪಲಿ
ಮೈ ಸಾಕಲು ಸಾಕು
ಕೂಳ ರಾಶಿಯು ಎನಗೆ
ಎಂದೆನುತ ಸಾಕಿವೆ ಜೀವ
ಎನ್ನ ಆಸೆಯ ಮನೆಯ ಕೂಸ

ಭಾನುವಾರ, ಫೆಬ್ರವರಿ 16, 2020

ತೊರೆಯದಿರೆನ್ನನು ಕೃಷ್ಣ 
ರಾಧಿಕ ವಲ್ಲಭ ಶ್ರೀ ಕೃಷ್ಣ 
ನಿನ್ನನೆ ನಂಬಿರುವ ಜೀವ
ನಿನ್ನೊಲು ಶರಣಾದ ಈ ಭಾವ||೨||

ನಾ ರಾಧೆಯಾಗಲಿಲ್ಲ ನಿನ್ನಯ
ಯಶೋದೆಯಂತೋ ಅಲ್ಲ ಕನಯ್ಯ
ಮರುಳಾದೆನು ನೋಡಿ ನಿನ್ನಾಟವನು
ಮರೆಯಲಾರೆನು ಬಾಲ ತುಂಟಾಟವನು..
ಸ್ವೀಕರಿಸೋ ಹೇ ಮುಕುಂದ
ನಿನ್ನ ಭಕ್ತಿಯ ಲೀಲಾನಂದ|೨|

ತಪ್ಪಿದ ಹೆಜ್ಜೆಗೆ ನಿನ್ನ ವಾಣಿಯು
ಸುಮಧುರ ಸಾನಿಕ ಧ್ವನಿಯು
ದುರುಳನ ರಕ್ಷೆಯ ಮುರಿದ ಮುರಾರಿ
ಮಗಳಿಗೆ ವರವನು ನೀಡಿದ ಶ್ರೀ ಹರಿ
ಆಸರೆ ನೀಡು ಅರ್ಜುನ ಸಖನೆ
ರುಕ್ಮಿಣಿ ಭಾಮೆಯ ಪ್ರಿಯಕರನೆ|೨|

ಭಾನುವಾರ, ಫೆಬ್ರವರಿ 9, 2020

ಜೀವದ ತಂತಿಯು ಮೀಟಿದೆ
ಹೃದಯದ ಗೆರೆಯನು ದಾಟಿದೆ
ಪಲ್ಲವಿ ಅರಿಯಲು
ಒಲವನು ಮರೆಯಲು
ಅನುಪಲ್ಲವಿ ತಾನೆ ಜಾರಿದೆ
ಭಾವನೆಗಳನು ಮಾರಿದೆ..
ಭಾವನೆಗಳನು ಮಾರಿದೆ..

ನೀರಿಗೆ ಬೀಳುವ 
ಕಲ್ಲಿನ ದನಿಯು
ಶಾಂತತೆಯನ್ನೆ ಕದಡಿದೆ
ಜೀವನ ಚೈತ್ರವ
ತುಂಬಿದ ನೆನಪುಗಳ
ಸಂಬಂಧವನ್ನೇಕೋ ಕಡಿದಿದೆ

ಮತ್ತದೇ ಬಿರುಗಾಳಿ
ಸುಡು ಬಿಸಿಲಿನಲಿ
ದೂರಕ್ಕೊಯ್ಯುತಿದೆ ಮನವನು
ತಿರುಗಲಾರೆನು ಸರಿಯಲಾರೆನೆಂದು
ನಯವಾಗಿ ದೂರುತ್ತಿದೆ
ದೂಡುತಿದೆ ಈ ತನುವನು