ಬುಧವಾರ, ಜುಲೈ 22, 2020

ಕೃಷ್ಣ ಕೃಷ್ಣ ಕೃಷ್ಣಾನೆನುತಾ..
ಬಂದರೆ ನೀ..
ಯಶೋಧೆಯಾಗುವೆನೇನೆ..
ದ್ವಾರಕಾಧೀಶ ದೀನರೊಳು
ಅಧೀನನಾಗಿರಲು
ಸಿಗುವನೇನೆ..
ತಾಯಿ ನಿನಗೆ ಸಿಗುವನೇನೆ..

ಕಿವಿಗಿಂಪಿಡುವ ಕಾನನದ
ಹಕ್ಕಿ ಧ್ವನಿಯೊಳು
ಬೆಟ್ಟದಾ ಝರಿಯಿಂದ
ಉದಿಸುವ ಶಬ್ದದೊಳು
ಹರಿನಾಮವನ್ನಾಡುವ 
ನಾಲಗೆಯ ರುಚಿಯೊಳು
ಅವನಿರುವನಲ್ಲದೆ..
ಹುಡುಕಿದರೆ ಸಿಗದವನು
ನಿನ್ನ ಮಗುವಿನ 
ನಗುವಿನಲ್ಲಿರುವನು ತಾಯಿ..
ಆ ಬಾಲಗೋಪಾಲ..
ನಿನ್ನ ಬಾಳ ಗೋಪಾಲ..

ನ್ಯಾಯ ಅನ್ಯಾಯಗಳ
ಮರ್ಮದೊಳಗೆ
ನೀ ಮಾಡುವ ದಾನಗಳ
ಕರ್ಮದೊಳಗೆ
ಸ್ವಾರ್ಥರಹಿತರು ಮಾಡಿದ
ರಾಜಧರ್ಮದೊಳಗೆ
ಅವನಿರುವನಲ್ಲದೆ..
ಕರಿಕಲ್ಲ ಉಳಿಯಿಂದ
ತೀಡಿದಾಗ ಇರದವನು
ನಿನ್ನಾತ್ಮದ ಅಂತರಂಗದ 
ಚೆಲುವು ಕಡಿದಾಗ
ಸುಂದರಾಂಗನು ತಾಯಿ..
ಆ ಪರಮಾತ್ಮನು..
ಚೆಲುವ ರಂಗನಾಥನು..

- ಪೃಥ್ವಿರಾಜ್ ಗಂಗೋತ್ರಿ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ